ಸಾಧಕರನ್ನು ಸಮಾಜ ಗುರುತಿಸುವಂತಾಗಲಿ -ಶ್ರೀಕಾಂತ್ ಶೆಣೈ-karavalivani
ಕೋಟ : ಸಾಧಕರನ್ನು ಸಮಾಜ ಗುರುತಿಸುವಂತಾಗಬೇಕು ಆಗ ತಾನೆ ಅವರು ಇನ್ನೊಬ್ಬರಿಗೆ ಮಾದರಿಯಾಗಿ ಸಮಾಜ ಮುಂದೆ ನಿಲ್ಲಲು ಸಾಧ್ಯ, ಕಾರಂತ ಥೀಮ್ ಪಾರ್ಕ್ನಲ್ಲಿ ದತ್ತಿ ಪುರಸ್ಕಾರದ ಮೂಲಕ ಸಾಧಕರನ್ನು ಗುರುತಿಸಿ ಮುಖ್ಯವಾಹಿನಿ ತರುತ್ತಿರುವುದು ಶ್ಲಾಘನೀಯ ಎಂದು ಸಾಂಸ್ಕೃತಿಕ ಚಿಂತಕ, ಉದ್ಯಮಿ ಶ್ರೀಕಾಂತ್ ಶೆಣೈ ಅವರು ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಯಕ್ಷಗಾನ ವಿಚಾರಗೋಷ್ಠಿ-ಯಕ್ಷಗಾನ ವೈಭವ ಕಾರ್ಯಕ್ರಮ ಒಡ್ಡೋಲಗ-2022(ನೆನಪಿನ ಕಾವಳ )ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.ಯಕ್ಷಗಾನ ಭಾಗವತ ಶ್ರೀ ಲಂಬೋದರ ಹೆಗಡೆ ಮಾತನಾಡಿ ಯಕ್ಷಗಾನದ ಪರಂಪರೆ ಮರೆಯದಂತೆ ಯಕ್ಷಗಾನವನ್ನು ಪ್ರಸ್ತುತ ಪಡಿಸಬೇಕಾಗಿದೆ ಎಂದರು.
ಯಕ್ಷಗಾನ ಸಂಘಟಕ ಪ್ರಸಾದ್ ಬಿಲ್ಲವ ಮಾತನಾಡಿ ಪ್ರೇಕ್ಷಕರನ್ನು ಮನದಲ್ಲಿ ಇರಿಸಿಕೊಂಡು ಅವರ ಅಭಿರುಚಿಗೆ ತಕ್ಕಂತೆ ಯಕ್ಷಗಾನಕ್ಕೆ ಚ್ಯುತಿ ಬರದಂತೆ ಪ್ರದರ್ಶನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ, ಸಮಾಜ ಸೇವಕ ಸಂತೋಷ್ ಪೂಜಾರಿ ಕದ್ರಿಕಟ್ಟು ,ಕಾರಂತ ಪ್ರತಿಷ್ಠಾನದ ಸದಸ್ಯ ಶ್ರೀ ಸುಬ್ರಾಯ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಶ್ರೀ ಪ್ರಶಾಂತ್ ನಿರೂಪಿಸಿದರು.
