ದೇಹ ಅಳಿದ ಮೇಲೆ ನೆನಪು ಮಾತ್ರ ಶಾಶ್ವತ: ತೆಕ್ಕಟ್ಟೆ ನರ್ಮದಾ ಪ್ರಭು-Karavalivani
ಈ ಸುದ್ದಿ ಓದಲು ಕ್ಲಿಕ್ ಮಾಡಿ
@karavalivani, @ಕರಾವಳಿವಾಣಿ
ಕೋಟ: ಸಣ್ಣ ಸಣ್ಣ ಮಕ್ಕಳು ಅಂಗಡಿಯ ಪರಿಸರಕ್ಕೆ ಬಂದರೆ ಮುದ್ದಿಸುವ ರೀತಿ, ಪರಿಸರದವರೊಂದಿಗಿನ ಪ್ರೀತಿ-ವಿಶ್ವಾಸ ಎನ್ನುವುದು ಕೃಷ್ಣ ಮೆಂಡನ್ರನ್ನು ಕಳೆದು ಕೊಂಡ ಈ ಸಂದರ್ಭ ಸಂಸ್ಮರಣೆಯ ನೆಪದಲ್ಲಿ ನಮ್ಮೆಲ್ಲರ ಕಣ್ಣು ಇಂದು ತೇವವಾಯಿತು.. ಸ್ವಲ್ಪ ದಿನ ಈ ಭುವಿಯಲ್ಲಿ ಇದ್ದು ಹೋಗಲು ಬಂದ ಅತಿಥಿಗಳು ನಾವು. ನಮ್ಮ ಬಾಳ್ವೆಯನ್ನು ಪ್ರೀತಿ ವಿಶ್ವಾಸದಿಂದ ಕಳೆಯಬೇಕು. ಬದುಕು ಶಾಶ್ವತವಲ್ಲ. ಅಳಿದ ಕಾಲದ ನಂತರದ ನೆನಪು ಶಾಶ್ವತ ಎಂದು ಸಾಹಿತಿಗಳಾದ ತೆಕ್ಕಟ್ಟೆ ನರ್ಮದಾ ಪ್ರಭು ಅತಿಥಿಗಳಾಗಿ ಅಭಿಪ್ರಾಯಪಟ್ಟರು.
ಸೆ.15ರಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯೋಜನೆಯಲ್ಲಿ ಕೃಷ್ಣ ಮೆಂಡನ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ನರ್ಮದಾ ಪ್ರಭು ಮಾತನ್ನಾಡಿದರು.
ಪರಿಸರದಲ್ಲಿ ಪ್ರೀತಿಯ ಸಂಬoಧದಿoದ ಬೆಳೆದು ಬೆಳಕಾಗಿ ಅಕಾಲಿಕವಾಗಿ ಅಳಿದು ಉಳಿದವರು ಕೃಷ್ಣ ಮೆಂಡನ್. ಸಮಾಜದಲ್ಲಿ ಎಲೆಯ ಮರೆಯಾಗಿ ಅಳಿಲು ಸೇವೆ ಮಾಡುತ್ತಾ ಸರಳ ಜೀವನದಲ್ಲಿಯೂ ಹೃದಯ ಶ್ರೀಮಂತಿಕೆ ಮೆರೆದವರು ಎಂದು ಸಂಸ್ಮರಣಾ ಮಾತುಗಳಲ್ಲಿ ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನ್ನಾಡಿದರು. ಪುತ್ರ ರಂಜಿತ್ ಕುಮಾರ್ ಮಾತನ್ನಾಡಿ ತನ್ನ ತಂದೆಯ ಸಮಯಪಾಲನೆ, ಶಿಸ್ತು ಬದ್ಧ ಜೀವನವನ್ನು ಬಳಗಕ್ಕೆ ಮಾದರಿಯಾಗಿಸಿ, ನೆನಪಲ್ಲಿ ಉಳಿದವರು ಎಂದು ನೆನಪಿಸಿಕೊಂಡರು.
ದೇಗುಲದ ಆಡಳಿತ ನಿರ್ದೇಶಕರಾದ ರಾಮಮೂರ್ತಿ ಪುರಾಣಿಕ್, ಪ್ರಧಾನ ಅರ್ಚಕ ಜನಾರ್ಧನ್ ಐತಾಳ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು. ಪ್ರಶಾಂತ್ ಮಲ್ಯಾಡಿ ಕಾರ್ಯಕ್ರಮ ನಿರೂಪಿಸಿ, ಸುಹಾಸ ಕರಬ ಧನ್ಯವಾದ ಗೈದರು. ಬಳಿಕ ಸೋಣೆ ಆರತಿ ಪ್ರಯುಕ್ತ ಕೈಗೊಂಡ ಕಾರ್ಯಕ್ರಮದಲ್ಲಿ ಅಪೂರ್ವ ಮೆಲೋಡೀಸ್ ತೆಕ್ಕಟ್ಟೆ ಬಳಗದವರಿಂದ “ಭಕ್ತಿ ರಸಮಂಜರಿ” ಕಾರ್ಯಕ್ರಮ ಪ್ರಸ್ತುತಿಗೊಂಡಿತು.

