ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಪ್ರಾಚಾರ್ಯ ಕೆ.ಪಿ.ಹೆಗಡೆ ಹಾಗೂ ಯಕ್ಷ ಸಿರಿ ಪ್ರಶಸ್ತಿಗೆ ಭಾಜನರಾದ ಬಾಲಕೃಷ್ಣ ನಾಯಕ್ ಹಂದಾಡಿ ಇವರ ಅಭಿನಂದನಾ ಕಾರ್ಯಕ್ರಮ-karavalivani
@karavalivani, @ಕರಾವಳಿವಾಣಿ
ಕೋಟ: ಯಕ್ಷಗಾನ ರಂಗಭೂಮಿಗೆ, ಅಭಿನಂದನೆಗೊಳ್ಳುತ್ತಿರುವ ಈರ್ವರು ಸಾಧಕರು, ಮೌನವಾಗಿ ತಪಸ್ಸಿನಂತೆ ಯಕ್ಷ ಸೇವೆಗೈದ ನಿಜವಾದ ಸಾಧಕರು. ಗದ್ದಲವಿಲ್ಲದೆ ಯಕ್ಷ ಸೇವೆಯನ್ನು ಪೂಜೆ ಎಂದು ಬಗೆದು ಪೂರೈಸಿದ ಅರ್ಹರಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಬಾಲಕೃಷ್ಣ ನಾಯಕ್ ಹಂದಾಡಿ ಯಕ್ಷಗಾನ ಅಕಾಡೆಮಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ನೂರಾರು ಭಾಗವತರನ್ನು ಯಕ್ಷರಂಗಕ್ಕೆ ನೀಡಿ, ನಾಲ್ಕು ದಶಕಗಳ ಕಾಲ ಮೇಳದಲ್ಲಿ ದುಡಿದು, ಅಜಾತಶತ್ರುವಾದ ಕೆ.ಪಿ ಹೆಗಡೆಯವರು ಯಕ್ಷಗಾನದಿಂದಲೇ ತಮ್ಮ ಆರೋಗ್ಯವನ್ನು ಕಳೆದುಕೊಂಡು ಯಕ್ಷಗಾನಕ್ಕೆ ಅಪಾರ ಕೊಡುಗೆಯನ್ನು ಕೊಟ್ಟ ಮಹನೀಯರು. ಇನ್ನು ಬಾಲಕೃಷ್ಣ ನಾಯಕ್ ಹವ್ಯಾಸಿ ರಂಗಭೂಮಿಯನ್ನು ವಿಸ್ತಾರವಾಗಿ ಬೆಳಗಿಸಿದ ಬೆಳೆಸಿದ ಅವರು ವೇಷಭೂಷಣವನ್ನು ಪೂರೈಸಿ ಕಲಾವಿದರನ್ನು ರಂಗಕ್ಕೆ ಹೆಚ್ಚು ಹೆಚ್ಚು ಒದಗಿಸಿದ್ದಾರೆ. ಕುಟುಂಬವನ್ನು ಬಳಸಿಕೊಂಡು ವೇಷಗಳನ್ನು ಕಾಪಿಟ್ಟುಕೊಳ್ಳುವುದು, ಜತನಗೊಳಿಸುವ ಕಾರ್ಯ ಶ್ಲಾಘನೀಯ. ಇವರಿಗೆ ಸಂದ ಪ್ರಶಸ್ತಿ ಗರಿ ಅರ್ಥಪೂರ್ಣವಾಯಿತು ಎಂದು ಅಭಿನಂದನಾ ಮಾತುಗಳಲ್ಲಿ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ಮುರಳಿ ಕಡೇಕಾರ್ ಪ್ರಸ್ತಾಪಿಸಿದರು.
ಸೆ.9ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ನೇತೃತ್ವದಲ್ಲಿ 2022ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಪ್ರಾಚಾರ್ಯ ಕೆ.ಪಿ.ಹೆಗಡೆ ಹಾಗೂ ಯಕ್ಷ ಸಿರಿ ಪ್ರಶಸ್ತಿಗೆ ಭಾಜನರಾದ ಬಾಲಕೃಷ್ಣ ನಾಯಕ್ ಹಂದಾಡಿ ಇವರ ಅಭಿನಂದನಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಅಭಿನಂದನಾ ಮಾತುಗಳನ್ನಾಡಿದರು.
ಯಕ್ಷ ಕಲಾವಿದರಿಗೆ ಯಕ್ಷಗಾನ ಉಸಿರಾಟವಿದ್ದಂತೆ. ಸಾವಿರ ವರ್ಷದ ಇತಿಹಾಸ ಇರುವ ಯಕ್ಷಗಾನವನ್ನು ಜನ ಉಳಿಸಿಕೊಳ್ಳುತ್ತಾ ಬಂದಿದ್ದಾರೆ. ಅದಕ್ಕೆ ರಾಜಾಶ್ರಯವಿರಲಿಲ್ಲ. ಆದರೂ ಜನರಿಂದ ಯಕ್ಷಗಾನ ಉಳೀತು. ಕನ್ನಡ ಸಂಸ್ಕೃತಿಯನ್ನು ಉಳಿಸುವ ಕಲೆ ಯಕ್ಷಗಾನ. ಯುನಿರ್ಸಿಟಿ ಕಲಿಸುವ ಪಾಠ ಕಲಿಸುತ್ತದೆ ಯಕ್ಷಗಾನ. ಯಕ್ಷಗಾನಕ್ಕೆ ಕೊಟ್ಟ ಕೊಡುಗೆಯನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಯನ್ನು ಅರ್ಹರಿಗೆ ಸಿಕ್ಕಿದೆ ಎಂಬುದು ಹೃದಯ ತುಂಬಿ ಬರುತ್ತದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ. ಎಲ್. ಹೆಗಡೆ ಅತಿಥಿಯಾಗಿ ಮಾತನ್ನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಅಕಾಡೆಮಿ ರಿಜಿಸ್ಟಾçರ್ ಶಿವರುದ್ರಪ್ಪ, ಅಕಾಡೆಮಿ ಸದಸ್ಯ ಕೆ.ಎಮ್. ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮ, ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಕ್ಷದೇಗುಲದ ಸುದರ್ಶನ ಉರಾಳ, ಕೇಂದ್ರದ ಪ್ರಾಚಾರ್ಯರಾದ ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆ ನಿಟ್ಟೂರು, ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ವೈದ್ಯ ಧನ್ಯವಾದ ಗೈದರು. ಕಾರ್ಯಕ್ರಮವನ್ನು ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿದರು. ಬಳಿಕ ಯಕ್ಷಕೂಟ ಕದ್ರಿ, ಮಂಗಳೂರು ಇವರಿಂದ ತೆಂಕು ತಿಟ್ಟು ಯಕ್ಷಗಾನ ‘ಸುದರ್ಶನ ಗರ್ವಭಂಗ’ ರಂಗದಲ್ಲಿ ಪ್ರಸ್ತುತಿಗೊಂಡಿತು.

